ಬುಧವಾರ, ಏಪ್ರಿಲ್ 10, 2013

ಶರತ್ ಚಕ್ರವರ್ತಿ 

ಹರೆಯ ಹ್ಯಾಂಗ್ ಆದಾಗ
ಊರ್ದ್ವಮುಖ ಮಾಡಿ ನಿಂತ ಕನಸೊಂದು
ನಡು ರಾತ್ರಿ ಸ್ಖಲಿಸುತ್ತಿದೆ.
ರೋಮ ರೋಮಗಳ ಜಲಕಿಂಡಿಗಳು
ವಿದ್ಯುತ್ ಮೂಲಗಳು
ನರನಾಡಿಗಳಲ್ಲಿ ಪ್ರವಹಿಸಿ
ಅಂಟು ಬೆವರ ಕಂಟು ಗಮಲು
ಬುದ್ದಿ ಮಂಕು, ದೃಷ್ಟಿ ಕ್ಷೀಣ
ಬೆದೆಯ ಹಾವಿಗೆ ಕಿವಿಗಳಿಲ್ಲ
ಮೂಳೆಗಳಿಲ್ಲ, ತಡವಿದಲ್ಲೆಲ್ಲಾ ಮೆದು ಮಾಂಸ
ಚಪ್ಪರಿಸುವ ರುಚಿ ತಿಂದಷ್ಟೂ ಮುಗಿಯದು
ತೇಗುವ ಮಾತೆಲ್ಲಿ, ಬರಿ ನರಳಿಕೆಗಳು ಮಾತ್ರ
ಹಿರಿಮೆ ಗರಿಮೆಗಳಿಲ್ಲದೇ ಹೊರಳುವಾಗ
ಸರದಿಯಂತೆ ಸರಿದಾಟ ; ಮೇಲೆ-ಕೆಳಗೆ
ಅವುಚಿ ಹಿಡಿದರೂ ಕಿವುಚಿ ತಿಂದರೂ
ಕರಗದ ಮನಸು
ಆಕಾಶದೆಡೆಗೆ ದೃಷ್ಟಿನೆಟ್ಟು ಚಂದ್ರಿಕೆಯನು ಹಿಡಿದೆಳೆದು
ಕುಟ್ಟಿ ಹದ ಮಾಡಿ ಹರಡಿಕೊಳ್ಳುವ
ಶಿಖರ ಸ್ವರೂಪಿ ಕನಸು
ಹಸಿವನ್ನ ಅರಗಿಸಿ ದಾಹ ಸ್ರವಿಸುವ
ನಡುವಲ್ಲಿ ಉಗಮತಾಣ ಚಿಮ್ಮಿದೆ
ಅಲ್ಲೊಂದಿಷ್ಟು ಸ್ಖಲಿತ ಕನಸುಗಳು
ಜೀವಪಡೆವ ತವಕದಲ್ಲೇ ವಸರಿಕೊಂಡು
ಅನಾಥವಾಗಿ ಅದೃಶ್ಯವಾಗುತ್ತವೆ
ಕೊಸರಿಕೊಳ್ಳುತ್ತಿದ್ದ ಮನಸ್ಸು ಧಿಸ್ಸ್..ನೇ
ನಿಟ್ಟುಸಿರ ನಿಡಿಸುಯ್ಯುತ್ತಾ ನಿದ್ರೆಗೆ ಜಾರಿದೆ
ಕುಸಿದು ಬಿದ್ದು ತಡವರಿಸಿ ಪುನಃ ಎದ್ದು
ಸಮಯ ಕಾದಿದೆ ಅವಕಾಶವಾದಿ ಕನಸು.
ನಡುರಾತ್ರಿ ಕಳೆದಿದೆ, ಮುಂಜಾನೆ ಮೂಡಿದೆ
ಮನಸು ಮನಸಾ ಮಾಡಿದರೆ ಮತ್ತೊಂದು ಕನಸು
;ಹಗಲುಗನಸು.

ಸೋಮವಾರ, ಏಪ್ರಿಲ್ 8, 2013

ಆನಂದ್ ಕುಂಚನೂರು 
ಒಂದೆಳೆ ಬತ್ತಿ

'ಲೇ ಈರಾs..
ನೋಡೊ ಆ ದೀಪದ ಕೆಳಗ ಕತ್ತಲಾs..'
'ವ್ಯವಸ್ಥಾ ಮಾಡೆನಿ ಗೌಡ್ರ, ಹಚ್ಚೆನಿ ಅದರಡಿಗೆ ಇನ್ನೊಂದ್ ದೀಪಾ..'
'ಮತ್ತದರಡಿಗೆ?'
'ಚಿಂತೀ ಬ್ಯಾಡ್ರಿ, ಒಂದರ ಅಡಿಗೆ ಒಂದು,
ಅದರ ಕೆಳಗ ಮತ್ತೊಂದು, ಮಗದೊಂದು...ಹಿಂಗs..
ನಿಮ್ಮಂಗಳದ ತುಂಬ ದೀಪದ ಸಾಲs..ಥೇಟ್ ಬೆಳದಿಂಗಳs..'
'ಹಂಗಾದ್ರ ಹೊಡಿ ಢಂಗೂರ ಊರಿಗೆ
ಲಕ್ಷದೀಪೋತ್ಸವ ಗೌಡರಿಂದ...'


'ಲೇ ಈರಾs..
ವಸೂಲಿ ಮಾಡಿದ್ಯೇನೋ ಎಲ್ಲಾರ ಸಾಲಾs..'
'ಇರೋಬಾರೋ ನೆಲಕ್ಕೆಲ್ಲ ನಿಮ್ಹೆಸರ ಬರ್ದನ್ರಿ..'
'ಮತ್ತೇನ ಬಳಕೊಂಡ್ಯೋ..'
'ಅದರ ಉಸಾಬರಿನ ಬಿಡ್ರಿ, ಬಡ್ಡಿಗೆ ರೊಕ್ಕಾ,
ಚಕ್ರಬಡ್ಡಿಗೆ ಮನಿ ಮಠಾ..ಬರೋಬ್ಬರಿ ಹಸನ ಹಿಂಗs..
ಅವ್ರ ಮಾಂಸಾ,ಎಲುವು ಯಾರೊ ಕೊಟ್ಟಿದ್ದಂತ, ದೇವ್ರ!
ತಿರುಪತಿ ಹುಂಡಿ ನಿಮ್ ಭಂಡಾರ..'
'ಹಂಗಾರ ಕೂಗಿ ಹೇಳ ಊರಿಗೆ
ತುಲಾಭಾರ ಗೌಡ್ರಿಗೆ..!'

'ಲೇ ಈರೂs..
ಆ ಮೂಲಿಮನಿ ಮಾದೇವಿ ಸತ್ಲಂತಲ್ಲೋ..'
'ಗೊತ್ತಮಾಡ್ಸಿಲ್ಲ ಬಿಡ್ರಿ ಯಾರಿಗೂ, ನೀವ್ ಆಕಿ ಮೈಯುಂಡ ಸುದ್ದಿ'
'ಮತ್ತ ನಂ ಹಳೇ ಹೆಣ್ಣಗೋಳು?'
'ಆರಾಮಿರ್ರೀ..ಮೊನ್ನೆ ಪರವ್ವ,ಗಂಗವ್ವ ನಿನ್ನೆ
ಇಂದ ಈಕಿ..ಎಲ್ಲಾರೂ ಮಣ್ಣಾಗ!
ನಿಮ್ಮ (ದಲ್ಲದ)ಸಂತಾನ, ಅಕ್ರಮ ಬಾಣಿಂತನ'
ಹಂಗಾರ ಕರಿ ಎಲ್ಲಾ ಹೆಣ್ಮಕ್ಳನ್ನೂ
ಮುತ್ತೈದೇರಿಗೆ ಉಡಿ ತುಂಬೂನು..'


ಈರಾs..ಲೇ ಈರಾss..
ನನ್ನ ಕೈಗೆ ಕೋಲ ತಾ…ಹಿತ್ತಲಕ್ಕ ಹೊಗಬೇಕ
ಹಿಡಿ ನನ್ನ ಕೈ..ನಡಸ ನನ್ನ ಕಣ್ಣಿಲ್ಲದ ದಾರ್ಯಾಗ
ಎಲ್ಲಿ ಸತ್ತಿ?..
ಈರಾs..ಲೇ ಈರಾss..

ನಡು ಮನೆ ಜಂತಿಯಲಿ ತಣ್ಣಗೆ ಸರಕ್ ಎಂಬ ಬಿರುಕು!

ನಾವು ಬರೆಯುವುದಾದರು ಏತಕ್ಕೆ? - II

 

1. ಈಶ್ವರ ಭಟ್ . 

ಕಾವ್ಯ ಜೀವನಪ್ರೀತಿ

****************
 ನನಗೆ ನೋವಿನ ಎಳೆಯು ಮಂಜಾಗಿ ಕಾಣುವುದು
ನಲಿವೇನೋ ಹೊಮ್ಮುವುದು ಬೆಳಕಿನಂತೆ
ನಾನು ಬರೆಯುವ ಹಾಡಿಗಿನ್ನೆಷ್ಟು ತುಂಬುವುದು?
ಬದುಕು ನೋವ್ ನಲಿವುಗಳ ದೊಡ್ಡ ಸಂತೆ

ಕವನ ಜನಿಸುವ ಸಮಯ ನಿಶ್ವಿಂತನಾಗುವೆನು
ಕವನ ಕೇಳುವ ನೆಪದಿ ಮಾತು ಮರೆವೆ
ಕಚ್ಚುವುದು ಬೆಚ್ಚುವುದು ನುಡಿಯ ಆವೇಶಕ್ಕೆ
ಕವಿಗೇನ್ ಮಣಿಯುವುದು; ನುಡಿಗೆ ಮಣಿವೆ

ಪೂರ್ವಸೂರಿಗಳೆಲ್ಲ ರಮ್ಯದಲಿ ನವ್ಯದಲಿ 
ಹೇಳಿದ್ದು ಬಹಳಷ್ಟು ಗಳಿಕೆ ಶೂನ್ಯ!
ನೋಟುಗಳ ಕಟ್ಟಿನಲಿ ಮನುಜ ನಿದ್ರಿಪನೇನು
ಮರಣದಲಿ ಸಾಕೇನು ಕೀರ್ತಿ ಮಾನ್ಯ.

ಉದ್ಧರಿಸುವಾಸೆ ಕವನಕ್ಕೊ ಕವಿಗಳಿಗೊ
ಇರುವುದೇ? ಹಸಿ ಸುಳ್ಳು ಎಂಬೆ ನಾನು
ಕವಿಯು ಬರೆಯುವ ಹಾಡು ಕನ್ನಡಿಯ ಗಂಟಹುದು
ತೋರಬಹುದಷ್ಟೆ;ಪಡೆಯಲಾರೆ ನೀನು.

ಬಡತನಕೆ ಮರುಗಿದರು ಕ್ರೌರ್ಯಕ್ಕೆ ಉಗುಳಿದರು
ಅಕ್ಷರಕೆ ಉತ್ತರವ ಕೊಡುವನಾರು?
ಇಂತ ಕಾವ್ಯವನೋದಿ ಮೇಜು ಕುಟ್ಟಿದ ಸದ್ದು
ಬರೆದವಗೆ ಸದ್ಗತಿಯು;ಗಾಜು ಚೂರು

ಅನುಭವದ ಮಾತುಗಳ ಬರೆದು ಸೃಷ್ಟಿಸಿದಾತ
ನೆರೆಮನೆಯ ಜನಕೆಲ್ಲ ಕಟ್ಟುಕತೆಯು;
ತನ್ನ ವಿಷಯದ ಹೆಮ್ಮೆ; ನುಡಿಗಟ್ಟಿಗಿಹ ಬಲ್ಮೆ
ಓದುಗನ ತೋಟದಲಿ ಬೆಳೆದ ಕಳೆಯು.

ಕಾವ್ಯ ಜೀವನಪ್ರೀತಿ; ನನ್ನ ನೋಟದ ಕಾಣ್ಕೆ
ನಿಮಗೂ ಪ್ರೀತಿಯೆ ಗುರುತು ಬದುಕಿನಲ್ಲಿ
ನೋವ ಹಂಚುವುದೇನು ಖಾರ ತೆಗಳುವುದೇನು
ಹಾಯಾದ ಸೊಗದುಸಿರು ಕಾವ್ಯದಲ್ಲಿ.

ರಮ್ಯವೂ ಸುಂದರವೂ ಮನಸಹಜದಾಪೇಕ್ಷೆ
ಹಕ್ಕಿನೋಟವು ಇರಲಿ ನನ್ನ ಕಾವ್ಯ
ಸಹಜತೆಯ ಒಪ್ಪುವುದು; ಪ್ರೀತಿಯನು ಹೊದ್ದುವುದು
ಹಿತಕೆ ನಿಜಮಾನಸಕೆ ಇಳಿಯೆ ಧನ್ಯ.

೨. ಗಿರೀಶ್, ಹಂದಲಗೆರೆ
ಒಣಗಿದ ಅಮೇಧ್ಯ
****************

ಅನ್ನಕ್ಕಾಗಿ ಕರುಳು ಮಸೆಯುತ್ತಿರುವಾಗ
ರಸಕಾವ್ಯವ ಹೊಸೆಯಬಹುದೆ
ಓದಿಮರುಳಾಗಬಹುದೆ
ದುಡಿದು ಧಣಿದು ಬೆವರೊರೆಸುವಾಗ
ಹತ್ತೀತೆ ತಲೆಗೆ ಕಲೆ.

ಕುಂಚದಲಿ ಬಣ್ಣಮೆತ್ತಿಸಿಕೊಂಡು
ತೂಗಾಡುವ ಕ್ಯಾನ್ವಾಸುಗಳ ಭಾವ
ಹಸಿದ ಕಣ್ಣುಗಳಿಗೆ ರಸದೌತಣವಾಗುವುದೆ
ಶೃಶ್ರಾವ್ಯ ಸಂಗೀತ ರಾಗತಾಳಗಳ
ಹಸಿದಕಿವಿಗಳು ಆಲಿಸುವುವೆ
ಹೊರಡುವುದೇ ಶೃತಿ.
ಹಸಿದವನ ನಾಭಿಯಿಂದ
ಹಸಿದಾಗ ಕಲಾಸ್ವಾಧ,ಕಾವ್ಯಸೃಷ್ಟಿ
ಒಣಗಿದ ಅಮೇಧ್ಯ
ಕೆಂಡದುಂಡೆಗಳ ನುಂಗಿದನುಭವ ಕರುಳಿಗೆ

ಹೊಟ್ಟೆಪಾಡಿಗಾಗಿ ನೆಚ್ಹಬಹುದೇ ಕಲೆಕಾವ್ಯಗಳ
ನೆಚ್ಹಿದರೆ ಉಳಿಯುವುದೇ ನಮ್ಮತನ
ಅಕ್ಷರ,ಕಲೆಗಳ ನೆಚ್ಹಿದವರಿಗೆ
ಕೂದಲು ನೆರೆದು,ಕೋಲುಹಿಡಿದಮೇಲೆ
ಪ್ರಶಸ್ತಿ,ಪಲಕ,ಸನ್ಮಾನಗಳು,,
ಕೆಲವೊಮ್ಮೆ ಮರಣೋತ್ತರ !
ಬಣ್ಣ ಹಚ್ಹಿ ರಂಗವೇದಿಕೆ ಏರಿದರೆ
ಕೇವಲ ಭರಪೂರ ಚಪ್ಪಾಳೆ !

ಇವು ಹಸಿವಿಂಗಿಸುವುದಿಲ್ಲ
ಹಸಿವು ಎಲ್ಲವನ್ನೂ ಕಲಿಸಬಹುದು
ಹಸಿದವರಿಗೆ ಅನ್ನ
ಧಣಿದವರಿಗೆ ನೀರು
ತಣಿದವರಿಗೆ ಕಲೆ,ಕಾವ್ಯ,,,
ನನ್ನಂತವರಿಗಲ್ಲ:

೩. ಮಂಜುಳಾ, ಬಬಲಾಡಿ 
ನನ್ನ-ಬದುಕ ಸಮಕ್ಷಮ!
******************

ಕಾರಣ ಹುಡುಕುವ ಗೋಜಿದು ಯಾಕೆ?
ಭಾವಗಳ ಹರಿಬಿಡೆ ಸಂದೇಹವು ಬೇಕೆ?
ಬೇಕಿರುವುದು ಬರಿ ಮಾಧ್ಯಮ
ಅಕ್ಷರವಾಗಲಿ
ನನ್ನ-ಬದುಕ ಸಮಕ್ಷಮ!

ಒಳಗಣ್ಣಿಗೂ ಒಂದು ಕನ್ನಡಿ ಬೇಕು
ಕಲ್ಪನೆಗಳರಳಲು 
ಅಕ್ಕರ ಹನಿಗಳು ಬೇಕು
ನೆನಪನು ಹರವಲು 
ಪದಗಳ ಎರವಲು ಬೇಕು
ಎದೆಗುದಿ ಕಳೆಯಲು
ಹಾಳೆಯ ಹಾಸದು ಬೇಕು!

ಸತ್ಯವ ಹಂಚಲು
ಬೆಂಬಲ ಬೇಕು
ಬೆಳಕನು ಚೆಲ್ಲಲು
ಬೆರಗದು ಬೇಕು
ಬೆಸೆಯಲು ಮನಗಳ ಕೊಂಡಿ
ಬೇಕು ಅಕ್ಷರ-ಕಿಂಡಿ!

ಮೌನಕೂ ಉಂಟು ಬಗೆ-ಬಗೆ ಬಣ್ಣ
ಲೋಕದೊಳಗೆ ಸಾವಿರ ಲೋಕಗಳಣ್ಣ
ಬದುಕಿದು, ಬದುಕಿದು
ಪ್ರತಿಫಲನ
ಮಾನಸಗಳ ಸಂಕಲನ
ಅಕ್ಷರಗಳೇ ಇಲ್ಲಿ ರೂವಾರಿ 
ಜಗದ ತಿಳಿವ ಬೆಳೆಸುವ
ರಾಯಭಾರಿ!

೪.  ವಿನಯ್ ಭಾರದ್ವಾಜ್ , ನಂಜನಗೂಡು 

ಎದೆಗೆ ಬಿದ್ದ ಅಕ್ಷರ
**************

ಎದೆಗೆ ಬಿದ್ದ ಅಕ್ಷರವ
ಮಡಿಲಲಿ ಸಾಕುವ ಸಲುವಾಗಿ,
ಮುಡಿಯಲೇ ಬಿರಿದ ಮಲ್ಲಿಗೆಯ,
ಒಡಲಲೇ ಕಾಪಿಡುವ ಸಲುವಾಗಿ,
ಆಯಾಚಿತವಾಗಿ ತಾಗಿದ ಅಲೆಯ
ಮೊರೆತದ ಸಪ್ಪಳವ ಎದೆಯಲೇ
ಕಟ್ಟಿಡುವ ಸಲುವಾಗಿ,
ದಾರಿಹೋಕನ ಮೈಯ್ಯ ಬಿಸುಪಿನ ಬಿಸಿಯ
ಹಸಿಯಾಗಿ ಸಹಿಸುವ ಸಲುವಾಗಿ,
ನಿದ್ರಿಸಿದ ಕಂದಮ್ಮನ ಹಾಲ್ದುಟಿಯ
ತೊದಲಿನ ಕಾವ್ಯ ಕಾಣುವ ಸಲುವಾಗಿ,
ಮೋಹಿತನ ಕಡು ಪ್ರೇಮದ ಉತ್ಕಟತೆಗೆ
ಪ್ರೀತಿ-ವಿರಹದ ಪರಿಭಾಷೆ ಅರಿಯುವ ಸಲುವಾಗಿ,
ಪರಾಭವದ ಮೆಟ್ಟಿಲಲೂ ಎಡವಿ-ತಡವಿ
ದಿಗ್ವಿಜಯಕೆ ಹೊರಡುವ ಸಲುವಾಗಿ,
ಅಂತರಂಗದ ಆಳ ಅಗಲದ ವ್ಯಾಪ್ತಿಯ
ಗಡಿ ಮೀರಿಯೂ ಮೀರದೆ
ಅನ್ವೇಷಣೆಯ ಸಲುವಾಗಿ,
ಎಂದೋ ಭುಗಿಲೆದ್ದ ಸರೋವರವ
ಎದೆಯಲೆ ಬಚ್ಚಿಟ್ಟುಕೊಂಡು,
ಯಾರೋ ಕಂಪಿಸಿದ ಸ್ವರವ
ಹಾಡು ಕಟ್ಟಿ ಹಾಡ ತೊಡಗುತ್ತೇನೆ,
ಮಗದೊಂದು ಅಕ್ಷರ ಎದೆಗೆ
ಬೀಳುವವರೆಗೂ ಬರೆಯ ತೊಡಗುತ್ತೇನೆ....!!

ಭಾನುವಾರ, ಏಪ್ರಿಲ್ 7, 2013

ಗದ್ಯ ಕಾವ್ಯ ಪ್ರಯೋಗದ ಮೊದಲ ಪೈರುಗಳಿವು ...


1. ಗಿರೀಶ್, ಹಂದಲಗೆರೆ.

ಸ್ಖಲನ 
ಈ ಹಾಳುಪ್ರಾಯವೇ ಹೀಗೆ
ಅನ್ನನೀರಿಗಿಂತ ಕಾಮಪ್ರೇಮವನ್ನೇ ಧ್ಯಾನಿಸುತ್ತದೆ
ಕಂಡ ಹೆಣ್ಣುಗಳ ಎದೆಮೇಲೇ ಕಣ್ಣು
ಗಾತ್ರಗಳ ಅಳೆದು ಚಪ್ಪರಿಸುತ್ತದೆ ಮನ
ಯಾವುದೋ ಹೆಣ್ಣಿನ ದ್ವನಿ,ನಗೆ,ಬಳುಕುವ ನಡಿಗೆ
ಜೀಕುವ ಮುಂಗುರುಳು,ಗಲ್ಲ,ಹುಬ್ಬು,ತಗ್ಗು,,,
ರಾತ್ರಿಯ ನಿದ್ದೆಯಒದ್ದು ಚಡ್ಡಿಯ ಹೊದ್ದೆಯಾಗಿಸುತ್ತವೆ
ಸೂಳೆಯರ ಎಡತಾಕಿ ಪುರುಷತ್ವವ ಪರೀಕ್ಷಿಸಿಕೊಳ್ಳುವ ತವಕ
ಸರಿ ರಾತ್ರಿಯಲ್ಲಿ ಕಾಮಕರಗುವಾಗ ಕಿಟಕಿ ಬಾಗಿಲಿಗಳ ಇಣುಕಿಸುತ್ತದೆ
ಕದ್ದುಮುಚ್ಹಿನೋಡಿ ಸವಿದಷ್ಟೂ ನಿಗೂಡವಾಗುವ ಹೆಣ್ಣ
ಬೆತ್ತಲೆಗೊಳಿಸಿ ಸುಖವ ಸೂರೆಮಾಡುವ ಉತ್ಕಟ ಬಯಕೆ
ನಾಯಿ,ಕುರಿ,ಕೋಳಿ,ಹೋರಿಗಳ ಬೇಟಕ್ಕೆ ಕಣ್ಣ್ ಅರಳುತ್ತವೆ
ನಮಗೇಕಿಲ್ಲ ಮುಕ್ತತೆ ?ಎಂದು ಸಮಾಜವನ್ನ ಶಪಿಸುತ್ತದೆ
ಅಫೀಮಿನ ಅಮಲು ಏರುವ ಜವ್ವನೆ
ಪಕ್ಕದಮನೆಯ ಗೃಹಿಣಿ,ಪಾಠ ಹೇಳುವ ಮೇಡಂ,
ಅಕ್ಕರೆಯ ಅಕ್ಕ,ತಂಗಿ,ತಾಯಿಯರ ಎದೆಗಳತಡವಿ,
ಸ್ಕಲಿಸುತ್ತದೆ ಕನಸಿನಲ್ಲಿ!
ಛೇ ಬೇಡವೆ ಕಾಮಕ್ಕೆ ಕಣ್ಣು
ತಪ್ಪು ಪ್ರಾಯದ್ದೋ, ಪ್ರಕೃತಿಯದ್ದೋ?
ಇಟ್ಟ ಹೆಸರು ಈಡಿಪಸ್ ಕಾಂಪ್ಲೆಕ್ಸ್.


2 . ವಿನಯ್ ಭಾರದ್ವಾಜ್ , ನಂಜನಗೂಡು 

ಒಮ್ಮೆ ದಿವಂಗತನಾಗಬೇಕು!


ಬದುಕಿನ ಇಷ್ಟಗಲದ ಅಂಗಳದಲಿ ಹೆಕ್ಕಿದ ಹೂಗಳು, ಅವೆಷ್ಟೋ ಲೆಕ್ಕವಿಲ್ಲ. ಅದರ ಗಂಧ ಮಾತ್ರ ಕನಸಿನಲ್ಲೂ ಸ್ಪಷ್ಟ. ಹೂ ಕಟ್ಟಿದ ಬೆರಳು ಆಯಾಚಿತವಾಗಿ ಗಂಧ ಉಳಿಸಿಕೊಂಡರೆ, ತಾನಾಗಿ ಬಿಡಬಹುದೇನು ಭ್ರಷ್ಟ?! ಸಂಬಂಧಗಳ ತೂಗು ತಕ್ಕಡಿಯ ತೂಗಿದ ಕೈಗಳು ಎಣಿಸಿದರೆ ತಪ್ಪಾದೀತು, ಯಾವುದು ಲಾಭ, ಯಾವುದು ನಷ್ಟ? ನನ್ನದೇ ಪಪ್ರೆಶ್ನೆಗಳಿಗೆ ಅಗ್ನಿಗಾಹುತಿ...ಬದುಕೇನು ತನ್ನ ಪಾವಿತ್ರತೆಯ ಪ್ರೆಶ್ನೆಯೇ ಅಥವಾ ಪಾತಿವ್ರತೆಯ....? ಅಥವಾ ಬದುಕಿನ ತೀವ್ರತೆಯ! ಇಂತಹ ಉತ್ಕಟತೆಯಲಿ ತನ್ನ ಸುತ್ತ ತಾನೇ ಗೀರೆಳೆದುಕೊಂಡು, ಗೆರೆ ಮೀರಿ ಗಡಿಪಾರಾಗಿ ಬಿಡುವುದು.... ಅಲ್ಲಿ ಗುಡಿಗಳಿಲ್ಲ, ಸ್ಥಂಭಗಳಿಲ್ಲ, ಲಾಂಛನಗಳ ಸೋಗಿಲ್ಲ. ಅಲ್ಲೊಂದು ಅಸ್ತಿತ್ವವ ಕಂಡುಕೊಂಡ ಮೇಲೆ, ಅದನೂ ಮೀರುವ ಹಪಹಪಿ. ಒಳಗಿರುವ ಜ್ವಾಲೆ ಸದಾ ಉದ್ವಿಗ್ನ.
ಈಗ ತನ್ನ ಮಾನವತೆಯ ಪ್ರೆಶ್ನೆ. ತಾನೇನು ದೈವಾಂಶನೋ, ಅಥವ ರಕ್ಕಸನೋ? ಸಜಾತಿಯೂ ಅಲ್ಲದ ವಿಜಾತಿಯೂ ಅಲ್ಲದ ಹಾಗೆ... ಮೂಲದಲ್ಲಿ ತನ್ನ ಮಾನವತೆಯೇ ಕಳೆದಿದೆಯಲ್ಲ. ಹುಡುಕುವ ಹಾದಿಯಲ್ಲಿ ಪುನಃ ರೂಪಾಂತರಗೊಂಡು ಮತ್ತೇನೋ ಆಗಿ ಬಿಡಬೇಕೆಂಬ ತುಡಿತ! ರೂಪಾಂತರವೂ, ನಿದ್ರೆ, ಆಹಾರ, ಮಿಥುನದಷ್ಟೇ ಸಹಜವೇ...! ಇಂತಹ ಸ್ಥಿತ್ಯಂತರಗಳ ಮೀರಲೋಸುಗವಾದರೂ ದಿವಂಗತನಾಗಬೇಕು..ಒಮ್ಮೆ ದಿವಂಗತನಾಗಬೇಕು!"


3. ಪ್ರವರ, ಕೊಟ್ಟೂರು. 

ಜೀಕುವ ಮುಂಗುರುಳು

ಮುಂಗುರಳನ್ನು ಅದೆಷ್ಟು ಹೊತ್ತಿನಿಂದ ತಿರುವುತ್ತಲೇ ಇದ್ದೀಯಲ್ಲ,
ಕೆನ್ನೆ ಸವರಿ ಛೇಡಿಸುತಿದ್ದ ಅದನ್ನು ಹಾಗೇ ಇರಲು ಬಿಡು, ನಾನು ಮುಟ್ಟದ ಹೊರತು ಕೆಂಪೇರಬಾರದು;
ಬಳ್ಳಿಯುಂಗುರ ಹೀಗೆ ನಿನ್ನ ಮುಂಗುರುಳಂತೆ ಬಳುಕುತ್ತದೆ, ಬಳಸಿ ನಿಂತರೆ ನಾಚಿಕೆಗೆ ಮೇಲೆ ಪುಟಿಯುತ್ತದೆ
ಮಳೆ, ಧೂಳು, ಸಣ್ಣಗಿನ ಸುಳಿಗಾಳಿ ಎಲ್ಲವೂ ಅದರೊಳಗೆ ಗಾಢವಾಗಿ ಧಾನಿಸುತ್ತಾ ಕೂರುತ್ತವೆ
ಜಾರುವಾಟವಾಡುತ್ತವೆ ಜಾರು ಸೊಂಟದ ಮೇಲೆ ಬೆರಳಾಡಿಸಿದಂತೆ.
ಎದೆಯುಬ್ಬಿಸಿ ಜೋರಾಗಿ ಉಸುರುವಾಗ ಚಂಗನೆ ಹಾರಿ ಜೀಕುತ್ತದೆ ಒಮ್ಮೆ ಹಿಂದಕ್ಕೂ, ಇನ್ನೊಮ್ಮೆ ಮುಂದಕ್ಕೂ ಜೋಕಾಲಿ;
ನಿನ್ನ ಅರ್ಧ ಕಣ್ಣನ್ನು ಮುಚ್ಚಿ ತೂಗಿ ತೊನೆಯುವ ಆ ಮುಂಗುರುಳದೇ ಜಾದೂ
ಅದೆಷ್ಟು ಕಣ್ಣುಗಳು ನಿನ್ನ ಮೇಲೆ ಸುಳಿದಾಡುತ್ತಿವೆ, ಮೊದಲು ಲಟಿಕೆ ಮುರಿದು ದೃಷ್ಠಿ ತೆಗಿಸಬೇಕು;
ಹಾಗೆ ನೇವರಿಸದೇ ಬಿಡು ಹುಡುಗಿ ನಿನ್ನ ಮತ್ತೆ ಮತ್ತೆ ನೋಡಬೇಕು.


4.  ಪವನ್ ಪಾರುಪತ್ತೇದಾರ. ಬೆಂಗಳೂರು 
   
ಒಂದು  ಸ್ವಗತ 

ನಂದು ಕೂಡ ಮನಸೇ ಅಲ್ಲವೇ
ಅಂದು ನಿನ್ನಕ್ಕ ಎಂದು ಗೊತ್ತಿಲ್ಲದೇ ಸೂಪರ್ ಫಿಗರ್ ಎಂದಿದ್ದೆ
ಅದಕ್ಕೆ ಲಾಲ್ ಭಾಗಿನ ಬಿದಿರ ಪೊದೆಯಲ್ಲಿ ಎಷ್ಟು ಗಿಲ್ಲಿದ್ದೆ
ಕೈಮೇಲೆ ಇಂದಿಗೂ ಅದೇ ಗಾಯದ ಗುರುತು
ಮೊನ್ನೆ ಹೆಣ್ಣಿನ ಕಡೆಯವರು ಕೇಳ್ದಾಗ ಎಣ್ಣೆ ಹಾರಿದ್ದೆಂದೆ\
ಹೌದು ಪ್ರೀತಿಯಲಿ ಕಾದ ಪ್ರೇಮದೆಣ್ಣೆ ಹಾರಿದ್ದು
ನನ್ನ ನೋವನ್ನೆಲ್ಲಾ ನಿನ್ನ ಸುಖವಾಗಿಸಿಕೊಂಡಿದ್ದೆ
ನಿನ್ನುಗುರು ನನ್ ಚರ್ಮ ಹರಿದು ನೆತ್ತರಿಳಿಸುತಿದ್ದಾಗ ನನ್ನವಳ ನೋವ ಮರೆಸು ಎಂದಿದ್ದೆ
ಪ್ರೇಮದೆಣ್ಣೆಯ ಕಾವು ಹೆಚ್ಚಾಗಿ ಇದ್ದಾಗ,
ಒದ್ದು ಹೋದೆ ನನ್ನ ಶವದಂತೆ ಮರೆತು
ಈಗ ನೀ ಇರುವ ದೇಶ ಯಾವಾನಿಗೊತ್ತು
ಕೈ ಮೇಲೆ ಗಿಲ್ಲುತಿದ್ದೋಳು ಹೃದಯಾನು ಗಿಲ್ಲಿ ಓಡಿಹೋದ್ಯಲ್ಲೇ
ನಿದ್ದೆ ಮಾಡೋವಾಗ ಮೋಹಿನಿಯು ಬಂದಂಗೆ ನನ್ನೆನಪು ಬಂದಿಲ್ವ ಯಾವತ್ತು ನಿಂಗೆ
ನಂದು ಕೂಡ ಮನಸೇ ಅಲ್ಲವೇ

5.  ಪ್ರಶಾಂತ್ ಜೋಷಿ 
  
ಮಾಸಿ ಕತ್ಲ ಹಾದಿ

ಐತವಾರ ಅಮಾಸಿ, ಹಾಲು ಹೋಳಿಗಿ ಉಂಡು ಹೊಂಟಿದ್ದೆ,
ಕತ್ಲ ಹಾದಿ, ದೆವ್ವ ಬಿಟ್ಟು ಬೇರೆ ಯಾವ ಮನಶನು ಸಿಗಲ್ಲ.
ಬಾಯಾಗ ಒಂದು ಮಸ್ತ ಗಾನ.. ಬಿಟ್ಟು ಹೊಂಟೆಲ್ಲ ನನ್ನ ಹಳ್ಳಿ......
ಹುಡುಗಿ.... ಮುಂದಿನದು ನಂಗ ಬರಲ್ಲ.. ಹುಡುಗಿ

ಬಾಯಾಗ ಬೀಡಿ, ಕೈಯಾಗ ಬ್ಯಾಟರಿ, ಸೆಲ್ಲು ವೀಕ್ ಆಗ್ಯಾವ ..
ಏನು ಕಾಣಸವಲ್ತು..
ಹೊಲ ಕಾಯದು ಅಂದ್ರ ಹಿಂಗೆ ನೋಡಪಾ
ನನ್ ಜೊತಿ ನಾನ ಮಾತಾಡಬೇಕು. ಹೊತ್ತು ಹೋಗಬೇಕಲ್ಲ

ಕಾಲಾಗ ಏನೋ ಅಡ್ಡ ಬಂತು.
ಏ.. ಹಗ್ಗನಾ?? ಪರ ಪರ ಸುತ್ತಿ ಜೋರ್ ಒಗದೆ..
ಏನೋ ಸರಕ ಸರಕ ಸೌಂಡು....
ಬಾಜು ಎಲ್ಲಮ್ಮನ ಗುಡಿ ದೀಪ ತಂದು ನೋಡಿದ್ರ.......

ಅದು ಹಗ್ಗ ಅಲ್ಲ ಲೇ..... ಹಾವ...
ಯಪ್ಪಾ... ಸ್ವಲ್ಪದ್ರಾಗೆ ಉಳಿದೆ...
ಲೇ ಬಸ್ಯಾ, ನಿಮ್ಮವ್ವ ಹಣಮವ್ವ ಭಾಳ ಪುಣ್ಯ ಮಾಡ್ಯಾಳ ಲೇ...
ಅವರವ್ವನ ನಸೀಬ್ ಚಲೋ ಆದ, ನೀ ಉಳಿದಿ ಮಗನ ಇವತ್ತ....

ಹಚ್ಚು ಮತ್ತೊಂದ್ ಬೀಡಿ...

ಮಂಗಳವಾರ, ಏಪ್ರಿಲ್ 2, 2013

ನಾವು ಬರೆಯುವುದಾದರು ಏತಕ್ಕೆ?   ಪ್ರತಿಸ್ಪಂದನೆ ಹೀಗಿವೆ ....


೧. ಪ್ರವರ ಕೊಟ್ಟೂರು 


ಮೈಯ ಬೆವರ ನೈವೇದ್ಯ 
*****************
ಗುಳೆ ಹೊರಟು ನಿಂತ
ಕನಸುಗಳ ತಡೆಯಲಾರದೇ
ಬಿಕ್ಕಿಸಿ ಅತ್ತು
ಮೂಲೆ ಹಿಡಿದಿದ್ದ ಮಾತುಗಳನ್ನು
ಹಿಡಿದು ರಮಿಸಿ ಪದ್ಯವಾಗಿಸಲು
ಬರೆಯುತ್ತೇನೆ.

ಇದೋ ಮರಳುಗಾಡು
ಮರಳಿನೊಳಗೆ ಕಪ್ಪೆ
ಹುದುಗಿ
ಎಂದೋ ಬರುವ ಮಳೆಗೆ
ಅಂಡು ನೋಯುವಂತೆ
ಕಾಯಬೇಕು;
ನಾನೇನು ಕಪ್ಪೆಯಲ್ಲ
ಜೀವ ಹಿಡಿದುಕೊಂಡುಕಾಯಲು;
ಎಲ್ಲೋ ಓಡುವ
ಮೋಡಗಳ ಗುಪ್ಪೆ ಹಾಕಲು
ಬರೆಯುತ್ತೇನೆ.

ಹಿಡಿ ಮಣ್ಣಿಗೆ ಎದೆ ಪೀಠ
ಒಳಗೊಳಗೆ ಹೊಯ್ದಾಟ;
ತೂಕಡಿಸುವ ನೆರಳಿಗೆ
ಮೈಯೊಡ್ಡಿ ನಿದ್ದೆ ಬೇಡಿದವರಲ್ಲ;
ನಿಗಿ ನಿಗಿ ಕೆಂಡದ ನೆಲಕ್ಕೆ ಮೈಯ್ಯ ಬೆವರ
ನೈವೇದ್ಯ,
ಕೂನಿ ಕಹಾನಿಯ ಹೊತ್ತು ನಿಂತ
ಜಾಲಿ ಗಿಡಕೆ ನೂರು ಕಣ್ಣು,
ಸಾವಿರಾರು ಕೋರೆಹಲ್ಲು;
ಒಂದು ಬಿಳಿಯ ಹೂವ ಅರಳಿಸಲು
ಬರೆಯುತ್ತೇನೆ.

ನನ್ನನ್ನೇ ಮುಕ್ಕಿದ
ಮುಖದ ಚಹರೆಗಳ
ಬದಲಿಸುತ್ತೇನೆ;
ಇದೇನು ತೀಟೆಯಲ್ಲ
ತೊಡೆ ತಟ್ಟುವ ಹಠ;
ನಾನು ನಾನಾಗಿಯೇ ಇರಲು
ಬರೆಯುತ್ತೇನೆ.
-ಪ್ರವರ


೨. ಪವನ್ ಪಾರುಪತ್ತೇದಾರ, ಬೆಂಗಳೂರು


   ಉತ್ತರ ಸಿಗದ ಪ್ರಶ್ನೆ 
  **************


ಹೊಳೆದಿಲ್ಲ ಇನ್ನು ನನ್ನ ಪ್ರಶ್ನೆಗಳಿಗುತ್ತರ
ಭಾವನೆಗೆ ಬಣ್ಣೆ ಬಳಿಯೋದೇಕೆಂದು
ಸವೆದ ಚಪ್ಪಲಿಯ ಬಗ್ಗೆ
ಹೇಳಿಕೊಳ್ಳುವುದಾದರೂ ಏನು
ಮುರಿದ ಕನಸುಗಳ ಬಗ್ಗೆ
ಕೊಚ್ಚಿಕೊಳ್ಳುವುದಾದರೂ ಏನು
ಕಸದ ತೊಟ್ಟಿಗೊಂದಷ್ಟು ಸರಕು
ಏಷ್ಟು ಕಸ ಹೆತ್ತರೂ ಮುಗಿಯದಾ ಪ್ರಸವ

ಎತ್ತರದ ಜಗುಲಿಯ ಪೀಠಿಗಳ ನಡುವೆ
ತನ್ನದೇ ಸರಿ ಎನ್ನೊ ವಿತಂಡಿಗಳ ನಡುವೆ
ತೆಪ್ಪನೆ ಮೂಲೆಯಲಿ ಕೂರುವುದ ಬಿಟ್ಟು
ನಂದೊಷ್ಟು ಕಸವನ್ನು ದೂಡುವುದು ಯಾಕೆ
ಕಸದಂತೆ ದೂಡಿದರು ರಸವಾಗಿ ನೋಡಲಿ
ಎಂಬಂತ ತುಚ್ಚತನ ನನ್ನೊಳಗೆ ಯಾಕೆ

ನನ್ನವಳ ಕಿವಿಗೆ ಮಾಟಿ ಬೇಕಂತೆ
ನನ್ನ ಬಳಿ ಅದನವಳು ಹೇಳಿಕೊಂಡಾಗ
ಲೋಕದ ಮುಂದದನ ಒದರುವುದು ಯಾಕೆ
ನನ್ನವಳು ನೋವಿಟ್ಟು ಸಂತಸದಿ ಇರುವಾಗ
ಅವಳನ್ನು ಮರೆತು ನೆಮ್ಮದಿಯಿಂದಿರೊಬದಲು
ಪರರಿಗೂ ಅದನೆಲ್ಲ ಉಣಬಡಿಸೋದ್ಯಾಕೆ
ಲೋಕದ ನೋವುಗಳ ನಾನೂನು ಅನುಭವಿಸಿ
ಲೋಕಕೆ ಮತ್ತದನ ಹರಡುವುದು ಯಾಕೆ
-ಪವನ್ ಪಾರುಪತ್ತೇದಾರ


೩. ವಿನಯ್ ಭಾರದ್ವಾಜ್ , ನಂಜನಗೂಡು


ಕವಿತೆಯ ಪ್ರತಿ ರೂಪಕ
****************

ಅಟ್ ಲೀಸ್ಟ್ ನಿನ್ನೆಡೆಗಿನ ನನ್ನ ಹೋಲಿಕೆ,
ಉತ್ಪ್ರೇಕ್ಷೆ ಅಲ್ಲದಿದ್ದರೂ ರೂಪಕವಾದರೂ ಹೌದು...
ಹಾಗೆಂದು ನನ್ನ ಕವಿತೆಯ ಪ್ರತಿ ರೂಪಕವನ್ನು,
ನೀನು ಉಪೇಕ್ಷಿಸುವಂತಿಲ್ಲ ಕಣೆ...

ಬೈ ಟು ಕಾಫಿಯಾದರೂ ನೀ ಗುಟುಕಿಸಿದ
ಕಪ್ಪಿನ ಕಾಫಿಯ ರುಚಿಯೇ ಸಿಹಿ ಎಂದರೆ,
ನನ್ನ ಕಹಿ ಕಷಾಯ ಕಾಫಿಯನ್ನು,
ನೀನು ಸಂದೇಹಿಸುವಂತಿಲ್ಲ ಕಣೆ....

ನಿನ್ನ ಪ್ರತಿ ಸ್ಪರ್ಶದ ಕಂಪನಕ್ಕೂ ನಾ ಅದುರಿದರೆ,
ಅದು ನಿನ್ನ ತಪ್ಪಲ್ಲ,
ಅಂತೆಯೇ ಆ ಮೋಹಕ ತುಟಿಗೆ ಚುಂಬಿಸಿದಾಗ ಬಣ್ಣ ಚದುರಿದರೆ,
ಅದು ನನ್ನದೂ ತಪ್ಪಲ್ಲ...![ಅದು ಯಾವ ಫ್ಲೇವರ್ರು ಗೊತ್ತಿಲ್ಲ!]

ಈಗೀಗ ಹಾಗಾಗುತ್ತಿದೆ,
ಜಪದ ನೆಪದಲ್ಲಿ ಪ್ರೇಮ ದೇವತೆಯೇ ಪ್ರತ್ಯಕ್ಷಳಾಗುತ್ತಾಳೆ,
ನಾನು ಯಾವ ವರವನ್ನೂ ಬೇಡದ ಮಾತ್ರಕೆ,
ಪ್ರತಿ ಕನವರಿಕೆಗೂ ನೀ ಬಾರದೆ ಹೋಗುವಂತಿಲ್ಲ ಕಣೆ...

ವಿನಯ್ ಭಾರದ್ವಾಜ್

೪. ರಾಜೇಂದ್ರ ಪ್ರಸಾದ್, ಮಂಡ್ಯ 

ತೊಟ್ಟಿಕ್ಕಿದಂತೆ ಎದೆಯ ರಕ್ತ , ನಿನ್ನ ಪದ್ಯ!
***************************

ನೀನು ಜೊತೆಗಿರದ ರಾತ್ರಿಗಳ
ಮಾರಿಕೊಂಡೆ..
ಏಕಾಂತದ ದವಲಾಗ್ನಿಯ
ಉಣಿಸಲು,
ಕವಿತೆಯ ಸಂಗ ಮಾಡಿದೆ.

ನೀನು ಮಾಡಿಟ್ಟ ವೈನೂ
ಬಜಾರಿನಲ್ಲಿ ಸಿಕ್ಕುವ ಸುಡು ಸಿಗರೇಟು
ಹಾಳು ಪಿಚ್ಚರುಗಳು ನನಗೆ ಪಥ್ಯವಲ್ಲ.
ನಿನ್ನ ಬಿಟ್ಟು ಯಾವುದರ ಹಿಂದೆಯೂ
ಒಲವಿಲ್ಲ,... ಹೋಗುವುದಿಲ್ಲ.

ನಿನ್ನ ಕಣಿವೆಯಲಿ ನಾನು ಜಾರುವಾಗ
ಹೇಳಿಕೊಂಡ ಕೇಳ್ವಿಗಳು, ಈಗ ಮಾತನಾಡುತ್ತವೆ
ಬಹಳ. ಕವಿಸಮಯವಂತೀಗ?
ನನಗೇನೋ ತಿಳಿಯದು
ಸುರತ ತಪ್ಪಿದಕ್ಕೆ ಕವಿತೆಯೇ ಸುಖ ಎಂದುಕೊಂಡೆ!

ಅಷ್ಟೇ ಅಲ್ಲ .. ನೀ ಬರುವುದರೊಳಗೆ
ಪೊರೆ ಕಳಚಿಕೊಳ್ಳುತ್ತೇನೆ.
ವಿಷವ ಕಕ್ಕಿಬಿಡುತ್ತೇನೆ. ಈ ಕವಿತೆಗಳಲ್ಲಿ
ನನ್ನ ನಗ್ನ ಸತ್ಯ ,
ಹೇಳಲರಿಯದ ಕೆಟ್ಟ ಕನಸು,
ನಿನ್ನೊಲವು ಉಸಿರುಗಟ್ಟಿವೆ.

ಸಾಕೆನಿಸಿ ನಿರ್ಭಾವಕ್ಕೆ ನನ್ನ ಬಿಗಿದಾಗ
ತೊಟ್ಟಿಕ್ಕಿದಂತೆ ಎದೆಯ ರಕ್ತ
ಹಾಳೆಯ ಮೇಲೆ ಚಿತ್ರವಾಗಿ ..
ಮತ್ತೆರಡು ಕಣ್ಣ ಹನಿಗಳು ಕೂಡಿ
ನಿನ್ನ ಪದ್ಯವಾಗುತ್ತದೆ.
- ರಾಜೇಂದ್ರ ಪ್ರಸಾದ್ 
 


5. ಶರತ್ ಚಕ್ರವರ್ತಿ, ಹಾಸನ.

ಅಸಹಾಯಕ ಕೈಗಳು.
**************
 
ಶಸ್ತ್ರವನ್ನು ಕೈಚೆಲ್ಲಿ ಹೊರಟವನು ಅವನು
ದೇಶ-ಕೋಶ ತ್ಯಜಿಸಿದವನಿಗೆ
ದಾರಿ ನಿರಾಳ ; ರಸ್ತೆ ಸವೆಯುವವರೆಗೆ
ನೆಟ್ಟ ದೃಷ್ಟಿಗಳಾವುವು ಅವನ ಬೆನ್ನಹತ್ತಲಿಲ್ಲ
ನಡೆದೇ ನಡೆದ.
ಅನಂತ ದೃಷ್ಟಿಯಲಿ ಎದುರಿದ್ದುದ ಮರೆತ
ಕೆಂಪು ಕಂಗಳ ಹಸಿರು ನರಗಳು
ಕ್ಷೀಣತೊಡಗಿದವು.

ಅತ್ತ ಅವನ ಕೋಟೆ ಉರುಳಿತ್ತು
ಮತ್ತೊಬ್ಬ ದೊರೆಗಲ್ಲಿ ಭೋಪರಾಕು
ಇವನಿಲ್ಲಿ ನಡೆಯುತ್ತಲೇ ಇದ್ದಾನೆ
ಕಾಲನೊಬ್ಬನೇ ಅವನ ಸಂಗಾತಿ
ನಿತ್ಯ ಅವರಿಗೆ ಅಡಿ ಮೂಡಿಸುವ ಆಟ
ಒಮ್ಮೆ ಅವ ಮುಂದೆ ಮತ್ತೊಮ್ಮೆ ಇವ
ಅಂತೂ ಕಾಲ ಕಯ್ಯೇ ಮೇಲಾಯಿತು.

ಮುಪ್ಪಿನಪ್ಪುಗೆ ಮುತ್ತಿಡುತ್ತಿತ್ತು
ಕುಸಿದು ಬಿದ್ದವನ ಕಣ್ಣಿಗೆ ಕಾಡಿದೇ
ಅವನದೇ ಭೂತ ; ಮರೆವನ್ನರಸಿ
ದಾರಿ ಸವೆಸಿದವನ ಮುಂದೆ ನೆನಪುಗಳ ಜಾತ್ರೆ
ನಾರುತ್ತಿದೆ ಮುಳ್ಳುಚುಚ್ಚಿ ಕೊಳೆತ ಹುಣ್ಣು
ಮುಡಿಯ ತುಂಬಾ ಜಡೆಯ ಜಡ್ಡು
ಕಾಲನಿಗೆ ಸಡ್ಡು ಹೊಡೆದ ಕ್ರೂರ ಕಣ್ಗಳು
ನಿರ್ವೀರ್ಯ ಪರಿತ್ಯಾಗಿಯ ಕಂಡು ಗೊರವಗಳು ನಕ್ಕಿವೆ
ಬಿದ್ದವನ ಹೊತ್ತು ನಡೆಯಲು ಕಾಲನೇನೋ ಕಾತರ
ಅನ್ವೇಷಕನ ಕಣ್ಗಳ ಕಲ್ಪಿಸುತ್ತಾ ಕುಳಿತ
ಕವಿ ಬೆವರುತ್ತಾನೆ.
ಅಸಹಾಯಕ ಕೈಗಳು ಬರೆಯತೊಡುಗುತ್ತವೆ.

-ಶರತ್ ಚಕ್ರವರ್ತಿ.